ವಿಜಯ ಸಿಂಧೂರ ತಾಳಿಕೋಟೆ
ಗುರುವಿಗೆ ಭಕ್ತರು ತುಲಾಭಾರ ಸೇವೆಯನ್ನು ಮಾಡುವುದು ಭಾರತೀಯ ಶ್ರೇಷ್ಠ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಕೊಡೆಕಲ್ಲ ದುರದುಂಡೇಶ್ವರ ಮಠದ ಮ.ನಿ.ಪ್ರ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ಲಕ್ಕುಂಡಿ ಗ್ರಾಮದ ಅಪ್ಪಸಾಹೇಬಗೌಡ ಭೀಮನಗೌಡ ಪಾಟೀಲ ಕುಟುಂಬದ ಸದಸ್ಯರು ಹಮ್ಮಿಕೊಂಡ ಪೂಜ್ಯ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಅವರ ತುಲಾಭಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗುರುವಿಗೆ ತುಲಾಭಾರ ಮಾಡುವುದರ ಮೂಲಕ ನೀವು ನಿಮ್ಮ ಭವದ ಭಾರವನ್ನು ಅವರ ಮೂಲಕ ಇಳಿಸಿಕೊಂಡಿದ್ದೀರಿ ಇಂಥಹ ಪುಣ್ಯದ ಕಾರ್ಯವನ್ನು ಮಾಡಿದಂತಹ ಅಪ್ಪಸಾಹೇಬಗೌಡ ಪಾಟೀಲರಿಗೆ ಅಭಿನಂದಿಸುತ್ತೇನೆ ಎಂದರು. ಸಾಸನೂರ- ತುಂಬಗಿ ಪೂಜ್ಯ ಮಹಾಂತಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ದೇವದುರ್ಗದ ಕಪಿಲ ಸಿದ್ದರಾಮ ಶಿವಾಚಾರ್ಯರು,ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು, ಪರದೇಶಿ ಮಠದ ಶಿವಯೋಗಿ ಶಿವಾಚಾರ್ಯರು, ಕಲ್ಮಠದ ಸಿದ್ದಲಿಂಗ ಶಿವಾಚಾರ್ಯರು, ಮಾತೋಶ್ರೀ ಸಾವಿತ್ರಿ ಅಮ್ಮನವರು,ಡಾ.ಗುರುಲಿಂಗಯ್ಯ ಹಿರೇಮಠ, ಶರಣಗೌಡ ಇಬ್ರಾಹಿಂಪೂರ,ರವಿಧಣಿ ದೇಶಮುಖ,ಎಸ್.ಎಸ್.ಹಾವರಗಿ,ಪುರಾಣಿಕ ರಾಚಯ್ಯ ಹಿರೇಮಠ ಹಾಗೂ ಗ್ರಾಮದ ಗಣ್ಯರು ಹಿರಿಯರು ಉಪಸ್ಥಿತರಿದ್ದರು.
