ವಿಜಯ ಸಿಂಧೂರ, ಸವದತ್ತಿ
ತಾಲೂಕಿನ ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ₹97.49 ಲಕ್ಷ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. ₹94,06,596 ನಗದು, ₹1,50,400 ಮೌಲ್ಯದ ಚಿನ್ನಾಭರಣ ಹಾಗೂ ₹1,92,860 ಮೌಲ್ಯದ ಬೆಳ್ಳಿ ಆಭರಣ ಸೇರಿವೆ.

ದೇವಸ್ಥಾನ ಅಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ, ಸವದತ್ತಿಯ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ದೇವಸ್ಥಾನದ ಪಂಡಿತ ಯಡೂರಯ್ಯನವರ ಪೂಜೆಯೊಂದಿಗೆ ಶುಕ್ರವಾರ ಹಾಗೂ ಶನಿವಾರ ಎಣಿಕೆ ನಡೆಯಿತು.
“ಸಿಸಿಟಿವಿ ಕ್ಯಾಮೆರಾ ಚಿತ್ರೀಕರಣದೊಂದಿಗೆ ದೇವಸ್ಥಾನದ 60 ಸಿಬ್ಬಂದಿ ಹಾಗೂ ಕೆನರಾ ಬ್ಯಾಂಕಿನ 10 ಸಿಬ್ಬಂದಿ ಹಾಗೂ ಹೋಂ ಗಾರ್ಡ್ ಹಣ ಎಣಿಕೆಯಲ್ಲಿ ಪಾಲ್ಗೊಂಡರು’ ಎಂದು ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ನಾಗರತ್ನಾ ಚೋಳಿನ ತಿಳಿಸಿದರು.

ಶೀತಲ ಕಡಟ್ಟಿ, ಅಲ್ಲಮಪ್ರಭು ಪ್ರಭುನವರ, ಆರ್.ಎಸ್. ಸವದತ್ತಿ, ಸಿ.ಎನ್.ಕುಲಕರ್ಣಿ, ಜಗದೀಶ ರೇವಣ್ಣವರ, ಪ್ರಭು ಹಂಜಗಿ, ಸದಾನಂದ ಈಟಿ, ವಿ.ಪಿ. ಸೋನ್ನದ, ವಿ.ಆರ್. ನೀಲಗುಂದ, ಕೆನರಾ ಬ್ಯಾಂಕ್ ಮ್ಯಾನೇಜರ್ ಚಾಣಾಕ್ಷ ನವಲಕರ ಇದ್ದರು.
