ರೋಣ: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಇತ್ತೀಚೆಗೆ ನಿವೃತ್ತ ನೌಕರರ ಪಿಂಚಣಿ ಹೆಚ್ಚಳ ಹಾಗೂ ವರ್ಷಕ್ಕೆ ಎರಡು ಡಿಎ ನೀಡಲು ಸಾಧ್ಯವಿಲ್ಲ ಎಂಬ ಹೇಳಿಕೆ ನಿವೃತ್ತ ನೌಕರರಲ್ಲಿ ಆರ್ಥಿಕ ಅಭದ್ರತೆಯುಂಟು ಮಾಡಿದ್ದು ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ಸರ್ಕಾರಿ ನಿವೃತ್ತ ನೌಕರರ ಸಂಘದ ರೋಣ ತಾಲ್ಲೂಕು ಅಧ್ಯಕ್ಷ ಎ.ಎಸ್.ಖತೀಬ್ ಆಗ್ರಹಿಸಿದರು.

ಬುಧವಾರ ರೋಣ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ರೋಣ ತಾಲ್ಲೂಕು ಘಟಕದ ವತಿಯಿಂದ ಈ ಕುರಿತು ರೋಣ ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಪಿಂಚಣಿ ನಿವೃತ್ತ ನೌಕರರ ಹಕ್ಕು ಆಗಿದ್ದು ಕೇಂದ್ರ ಸರ್ಕಾರ ಜೀವನದ ಮುಸ್ಸಂಜೆಯಲ್ಲಿರುವ ನಿವೃತ್ತರಿಗೆ ಪಿಂಚಣಿ ಪರಿಷ್ಕರಣೆಯ ನಿರಾಕರಣೆ ಡಿಎ ನಿರಾಕರಣೆ ಮೂಲಕ ತೊಂದರೆ ನೀಡುವುದು ಸರಿಯಲ್ಲ. 30-40 ವರ್ಷಗಳ ಕಾಲ ಸರ್ಕಾರಿ ಸೇವೆಯನ್ನು ನಿಷ್ಟೆಯಿಂದ ಮಾಡಿದ್ದು ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಹಗಲಿರುಳು ಶ್ರಮಿಸಿದ ನಮ್ಮನ್ನು ಇಳಿವಯಸ್ಸಿನಲ್ಲಿ ಕೇಂದ್ರ ಸರ್ಕಾರ ಕಡೆಗಣಿಸುತ್ತಿರುವ ದೊಡ್ಡ ದುರಂತವಾಗಿದ್ದು ಕೂಡಲೇ ಇಂತಹ ಕಠಿಣ ನಿರ್ಧಾರಗಳಿಂದ ಹಿಂದೆ ಸರಿಯಬೇಕು ನಿವೃತ್ತ ನೌಕರರನ್ನು ಸರ್ಕಾರ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಎಂದರು.
ಈ ವೇಳೆ ಸಂಘದ ರೋಣ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಎಲ್.ಎಸ್.ಹಂಚಿನಾಳ, ಬಿ.ಎಚ್.ನಾಯಕ, ಆರ್.ವಾಯ್.ಮುರಕಿ, ಕೆ.ಎಸ್.ಬಾರಕೇರ, ಬಿ.ಪಿ.ಅತ್ತಿಗೇರಿ, ಡಿ.ಬಿ.ತಳವಾರ, ಎಮ್.ಎನ್.ಹಾದಿಮನಿ, ಎಸ್.ಸಿ.ರಾಟಿಮನಿ, ಎಸ್.ಪಿ.ಹುನಗುಂಡಿ ಸದಸ್ಯರುಗಳಾದ ಜೆ.ಬಿ.ಕಲ್ಲನಗೌಡ್ರ, ಎಚ್.ಬಿ.ಐಹೊಳ್ಳಿ, ಎಮ್.ಎಸ್.ಶೀಲವಂತರ ಸೇರಿದಂತೆ ಇತರರು ಇದ್ದರು.
