ಧಾರವಾಡ: ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು.ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟದವರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಎಕರೆಗೆ ₹ 25 ಸಾವಿರ ಬೆಳೆ ಹಾನಿ ಪರಿಹಾರವನ್ನು ನೀಡಬೇಕು. ಬೆಳೆ ವಿಮಾ ಮೊತ್ತ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಾಲ ಮರುಪಾವತಿಸುವಂತೆ ರೈತರಿಗೆ ಬ್ಯಾಂಕ್ ಗಳವರು ನೋಟಿಸ್ ನೀಡುವುದನ್ನು ನಿಲ್ಲಿಸಬೇಕು. ಕೃಷಿ ಪಂಪ್ಸೆಟ್ಗಳಿಗೆ ದಿನಕ್ಕೆ 12 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಯಲ್ಲಪ್ಪ ಸೈದಾಪೂರ,ಕಲ್ಲಪ್ಪ ಶೀಸನಹಳ್ಳಿ, ರಾಯಪ್ಪ ಅಂಗಡಿ, ರಾಮನಗೌಡಪರವತಗೌಡ, ಆರ್.ಎಸ್.ಹುಗಾರ, ವಿಜಯಕ್ಷ್ಮೀ, ಮಂಗಳಾ ಹಿರೇಗೌಡರ, ರೇಣುಕಾ ಹೋಲಗೊಳ, ಚಂದ್ರವ್ವ ಸುರೇಬಾನ ಪ್ರತಿಭಟನೆಯಲ್ಲಿದ್ದರು.
