ವಿಜಯ ಸಿಂಧೂರ,ಸುಳ್ಯ
ತಾಲೂಕಿನ ಮುರುಳ್ಯ ಗ್ರಾಮದ ಕಡೀರ ಎಂಬಲ್ಲಿ ಶನಿವಾರ ಸಂಜೆ ನಡೆದಿರುವ ಕರುಣಾಜನಕ ಘಟನೆಯೊಂದು ಇಡೀ ಜಿಲ್ಲೆಯನ್ನೇ ಕಣ್ಣೀರಿಡುವಂತೆ ಮಾಡಿದೆ.ಶಾಲೆ ಮುಗಿಸಿ ಮನೆಗೆ ಬಂದು ಆಟವಾಡುತ್ತಿದ್ದ ಐದೂವರೆ ವರ್ಷದ ಮುದ್ದಾದ ಅವಳಿ ಸಹೋದರರು ಆಕಸ್ಮಿಕವಾಗಿ ಕೆರೆಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ.

ಮುರುಳ್ಯ ಕಡೀರ ನಿವಾಸಿ, ವೆಲ್ಡಿಂಗ್ ಕೆಲಸ ಮಾಡುವ ವಸಂತ ಅವರ ಪುತ್ರರಾದ ಜಶ್ವಿನ್ ಮತ್ತು ಜಸ್ವಿತ್ ಸಾವನ್ನಪ್ಪಿದ ದುರ್ದೈವಿಗಳು. ಇವರಿಬ್ಬರು ಮುರುಳ್ಯ ಶಾಂತಿನಗರ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿಗಳಾಗಿದ್ದರು.
ಯಾವಾಗಲೂ ಜೋಡಿಯಾಗಿಯೇ ಇರುತ್ತಿದ್ದ ಆ ಪುಟಾಣಿಗಳು ಶನಿವಾರ ಸಂಜೆಯೂ ಎಂದಿನಂತೆ ಶಾಲೆ ಮುಗಿಸಿ ಮನೆಗೆ ಬಂದಿದ್ದರು. ಮನೆಯಲ್ಲಿ ಅಜ್ಜ ಮತ್ತು ಅಜ್ಜಿ ಮಾತ್ರ ಇದ್ದರೆನ್ನಲಾಗಿದ್ದು, ಮಕ್ಕಳಿಬ್ಬರು ಆಟವಾಡುತ್ತಾ ಸಮೀಪದಲ್ಲೇ ಇದ್ದ ಕೆರೆಯತ್ತ ತೆರಳಿದ್ದಾರೆ.

ಆಟವಾಡುವ ಭರದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ.ಮಕ್ಕಳು ಕಾಣಿಸುತ್ತಿಲ್ಲ ಎಂದು ಹುಡುಕಾಡಿದಾಗ ಈ ದುರಂತ ಬೆಳಕಿಗೆ ಬಂದಿದೆ. ತಕ್ಷಣವೇ ಸುಳ್ಯದಿಂದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿ ಮಕ್ಕಳ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.ಒಟ್ಟಿಗೆ ಹುಟ್ಟಿ, ಒಟ್ಟಿಗೆ ಬೆಳೆದು, ಒಟ್ಟಿಗೆ ಕಣ್ಣು ಮುಚ್ಚಿದ ಈ ಕಂದಮ್ಮಗಳನ್ನು ನೋಡಿ ಹೆತ್ತ ಕರುಳುಗಳು ಮಾಡುತ್ತಿರುವ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.
