ವಿಜಯ ಸಿಂಧೂರ ತಾಳಿಕೋಟೆ
ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನಾ ಸೇವಾ ಸಮಿತಿ ವತಿಯಿಂದ ಮೂರನೇ ವಾರ್ಷಿಕೋತ್ಸವ ಅಂಗವಾಗಿ ಕಿತ್ತೂರು ರಾಣಿ ಚೆನ್ನಮ್ಮಳ ಭವ್ಯ ಮೂರ್ತಿಯ ಪ್ರತಿಷ್ಠಾಪನೆ ಜೂನ್ 21 ರಂದು ರಾಜವಾಡೆಯಲ್ಲಿ ನಡೆಯಲಿದೆ.

ಸುಮಾರು 15 ಅಡಿ ಎತ್ತರ, 600 ಕೆಜಿ ಭಾರ ಹೊಂದಿರುವ ಹಾಗೂ ₹11 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಂಚಿನ ಪುತ್ಥಳಿಯನ್ನು ಸಕಲ ವಾದ್ಯಮೇಳದೊಂದಿಗೆ ಭವ್ಯ ಮೆರವಣಿಗೆಯ ಮೂಲಕ ಪ್ರತಿಷ್ಠಾಪನಾ ಸ್ಥಳಕ್ಕೆ ತರಲಾಗುವುದು.
ಇಂದು ಮಧ್ಯಾಹ್ನ 3.00 ಗಂಟೆಗೆ ಪಟ್ಟಣದ ದೇವರ ಹಿಪ್ಪರಗಿ ರಸ್ತೆ, ಕೆಇಬಿ ಕಾರ್ಯಾಲಯದ ಮುಂಭಾಗದಲ್ಲಿರುವ ಕಿತ್ತೂರು ಚೆನ್ನಮ್ಮ ವೃತ್ತದಿಂದ ಮೆರವಣಿಗೆ ಆರಂಭವಾಗಲಿದೆ.

ಈ ಮೆರವಣಿಗೆಗೆ ಹಿಕ್ಕನುಗುತ್ತಿ ಲಿಂಗಾಯತ ಮಹಾಮಠದ ಮ.ನಿ.ಪ್ರ. ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ.
ಮೆರವಣಿಗೆಯು ಶ್ರೀ ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಮಾರ್ಗ, ಮಹಾರಾಣಾ ಪ್ರತಾಪ್ ಸಿಂಹ ವೃತ್ತ, ಶಿವಾಜಿ ಸರ್ಕಲ್, ಕತ್ರಿ ಬಜಾರ್ ಮಾರ್ಗವಾಗಿ ರಾಜವಾಡೆಗೆ ತಲುಪಲಿದೆ.
ಅಲ್ಲಿ ಲಿಂಗಾಯತ ಧರ್ಮದ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚೆನ್ನಮ್ಮಳ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು.
ಬಳಿಕ ನಿರ್ಮಿತ ವೇದಿಕೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ನಾಡಿನ ಹರಚರ ಗುರುಮೂರ್ತಿಗಳು, ವಿವಿಧ ಸಮಾಜಗಳ ಗಣ್ಯರು ಹಾಗೂ ರಾಣಿ ಚೆನ್ನಮ್ಮಳ ಅಭಿಮಾನಿಗಳು ಭಾಗವಹಿಸಲಿದ್ದಾರೆ.
ಮೆರವಣಿಗೆ ಹಾಗೂ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಮಿತಿಯ ಅಧ್ಯಕ್ಷರಾದ ನೀಲಮ್ಮಗೌಡತಿ ಪಾಟೀಲ ಹಾಗೂ ಗೌರವಾಧ್ಯಕ್ಷರಾದ ಚಂದ್ರಶೇಖರ ಪಾಟೀಲ ಜಂಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
