ವಿಜಯ ಸಿಂಧೂರ,ತಾಳಿಕೋಟೆ
ತಾಲೂಕಿನ ಕೂಚಬಾಳ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಯುವಕರು ಅರ್ಥಪೂರ್ಣವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಭೀಮಾಶಂಕರ ಮಠದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸುವ ಮೂಲಕ ಪರಿಸರ ಸಂರಕ್ಷಣೆ ಕುರಿತ ಜಾಗೃತಿ ಮೂಡಿಸಲಾಯಿತು.
ಯಾಂತ್ರಿಕ ಯುಗದಲ್ಲಿ ಪರಿಸರದ ಮಹತ್ವವನ್ನು ಅರಿತ ಬಿಡದಿಯ ಟೊಯೋಟಾ ಗೋಸೇಯಿ ಸೌತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ಸಾಹಿ ಯುವಕರು “ಪರಿಸರ ಮಿತ್ರ ಮಂಡಳಿ ಬಿಡದಿ” ಎಂಬ ತಂಡವನ್ನು ರಚಿಸಿಕೊಂಡು ತಮ್ಮ ಹುಟ್ಟೂರಿನತ್ತ ಕಾಳಜಿ ತೋರಿದ್ದಾರೆ. ಗ್ರಾಮದ ಪರಿಸರವನ್ನು ಹಸಿರಾಗಿಸಲು ಗಿಡ ನೆಡುವ ಮೂಲಕ ಮಾದರಿಯಾದ ಕಾರ್ಯವನ್ನು ಕೈಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಂಡಳಿ ಸದಸ್ಯರಾದ ಶಿವಾನಂದ ಮೇಕಳಿ ಅವರ ಸಕ್ರಿಯ ಭಾಗವಹಿಸುವಿಕೆ ಗಮನಾರ್ಹವಾಗಿತ್ತು. ಗ್ರಾಮ ಹಿರಿಯರು, ಮಹಿಳೆಯರು, ಮಕ್ಕಳು ಹಾಗೂ ಯುವಕರು ಒಗ್ಗೂಡಿ ಭಾಗವಹಿಸಿ ಹಸಿರು ಸಂಕಲ್ಪಕ್ಕೆ ಕೈಜೋಡಿಸಿದರು.“ಒಂದು ಗಿಡ – ಒಂದು ಜೀವ” ಎಂಬ ಸಂದೇಶದೊಂದಿಗೆ ನಡೆದ ಈ ಕಾರ್ಯಕ್ರಮ ಗ್ರಾಮದಲ್ಲಿ ಪರಿಸರ ಜಾಗೃತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಯುವಕರ ಈ ಹಸಿರು ಹೋರಾಟ ಇತರರಿಗೂ ಪ್ರೇರಣೆಯಾಗಲಿ ಎಂಬ ಆಶಯ ವ್ಯಕ್ತವಾಗಿದೆ.ಈ ಸಂದರ್ಭದಲ್ಲಿ ಸುರೇಶ ಕುರುವಿನಶೆಟ್ಟಿ,ರಾಜೇಶ ಇನಾಮದಾರ,ರಾಜುಗೌಡ ಬಿರಾದಾರ, ಚಂದ್ರಶೇಖರ ಹಿರೇಮಠ, ಪದ್ಮನಾಭ ಜೋಶಿ, ಶಶಿಗಿರಿ ಕುಲಕರ್ಣಿ, ದತ್ತು ಕುಲಕರ್ಣಿ, ನಿಂಗಪ್ಪ ಕುನ್ನೂರ, ನೀಲಕಂಠ ಕುರುವಿನಶೆಟ್ಟಿ, ಬಸಪ್ಪ ಮೇಟಿ, ನಾಗಪ್ಪ ಹೂಗಾರ, ಕಾಂತಪ್ಪ ಮೇಟಿ, ಸಿದ್ದು ಬಿರಾದಾರ,ಯಮನೂರ ಕುಂಬಾರ, ಅಂಬ್ರಪ್ಪ, ಜುಮ್ಮಾಣ್ಣಛಲವಾದಿ,ನಿಂಗಪ್ಪ ತುಂಬಗಿ,ಮುದಕಪ್ಪ ಚಲುವಾದಿ ಸೇರಿದಂತೆ ಕೂಚಬಾಳ ಗ್ರಾಮದ ಅನೇಕರು ಉಪಸ್ಥಿತರಿದ್ದರು.
